ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಿವಿಮಾತು!

14 ಆಕ್ಟೋ 10

 

ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯ
ನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯ

ಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲ
ನಾಡಿಗೆ ಒಳಿತು ಮಾಡದಿದ್ದರೆ ಮುಂದಿನ ಬಾರಿ ಗೆಲ್ಲಿಸುವುದಿಲ್ಲ

ವಿಧಾನಸೌಧದ ಗೋಡೆಯಲಿ ಬರೆದಿರುವುದ ಎಲ್ಲರೂ ಪಾಲಿಸಲಿ
ಮಂತ್ರಿಗಳಿಗೆ ತಾಕೀತು ಮಾಡಿ, ಕೆಲಸ ಮಾಡಿಯೇ ತೋರಿಸಲಿ

ಸರಕಾರದ ಕೆಲಸ ದೇವರ ಕೆಲಸ ಎಂಬುದು ಗೋಡೆಗಷ್ಟೇ ಅಲ್ಲ
ನೀವೂ ಮಾಡಿ ತೋರಿಸಿದರೆ ನಿಮ್ಮನ್ನೂ ಜನತೆ ಕೈಬಿಡುವುದಿಲ್ಲ

ದಿನ ಪ್ರತಿದಿನ ಸುದ್ದಿಗೋಷ್ಟಿ ಮಾಡಿ ಭಾಷಣ ಬಿಗಿಯಬೇಕಾಗಿಲ್ಲ
ಸರಕಾರದ ಕಾರ್ಯಗಳೇ ತಮ್ಮ ಪರವಾಗಿ ಮಾತಾಡಬೇಕಲ್ಲಾ

ಮಾಧ್ಯಮದ ಜೊತೆ ಮಾತಾಡಲು ಯಾರಾದರೊಬ್ಬರನ್ನು ನೇಮಿಸಿ
ಎಲ್ಲಾ ಟೀಕೆ ಟಿಪ್ಪಣಿಗಳಿಗೂ ಪ್ರತಿಕ್ರಿಯಿಸುವುದನ್ನು ದಯವಿಟ್ಟು ನಿಲ್ಲಿಸಿ

ಆಂತರಿಕ ಸಮಸ್ಯೆಗಳನೆಲ್ಲಾ ಪರಿಹರಿಸಿಕೊಳ್ಳಿ ತಮ್ಮ ತಮ್ಮೊಳಗೇ
ದೌರ್ಬಲ್ಯವ ಬಿಟ್ಟುಕೊಟ್ಟರೆ ಎಲ್ಲಾ ಕನ್ನ ಹಾಕುವರು ನಿಮ್ಮ ಮನೆಗೆ

ಬಾಯ್ಮುಚ್ಚಿಕೊಂಡು ಕೆಲಸ ಮಾಡಿದರೆ ಕಮಲ ಮುದುಡದು ಇಲ್ಲಿ
ಇಲ್ಲವಾದರೆ ಭಾಜಪ ಕೂರಬೇಕಾದೀತು ವಿರೋಧಿ ಬೆಂಚುಗಳಲ್ಲಿ
******