ಕನ್ನಡಪ್ರಭದವರಿಗೆ ಇಂದು ೨೭ ಸಪ್ಟಂಬರ ೧೪
26 ಸೆಪ್ಟೆಂ 14ಮೊದಲ ಭೇಟಿಯೇ ಕೊನೆಯ ಭೇಟಿ ಆಗಬೇಕಿತ್ತೇ?
26 ಡಿಸೆ 13
ನನಗೆ ಇಲ್ಲೋರ್ವರು ಸ್ನೇಹಿತರಿದ್ದಾರೆ. ಅವರದೊಂದು ಅಂಗಡಿ ಇದೆ.
ಆ ಸ್ನೇಹಿತರು ಯಾರು, ಅವರ ಅಂಗಡಿ ಯಾವುದರದ್ದು, ಅನ್ನುವುದು ಸದ್ಯ ಅಪ್ರಸ್ತುತ.
ಕಳೆದ ಏಳನೇ ದಿನಾಂಕದಂದು ಪೂರ್ವಾಹ್ನ ಹನ್ನೊಂದರ ಸುಮಾರಿಗೆ, ಅವರ ಅಂಗಡಿಯ ಮುಂದೆ ಹಾದುಹೋಗುತ್ತಿದ್ದಾಗ, ಆ ಸ್ನೇಹಿತರ ಮಗ ಮಾತ್ರ ಅಂಗಡಿಯಲ್ಲಿದ್ದ.
ಆತನನ್ನು ಮಾತಾಡಿಸುತ್ತಾ ನಿಂತಿದ್ದೆ. ಆಗ ಆತನಿಗೆ ಆತನ ತಾಯಿಯ ಕರೆ ಬಂತು.
ತಾಯಿಯೊಂದಿಗೆ ಮಾತಾಡಿ ಮುಗಿಸಿದ ಆತ “ಅಂಕಲ್… ನಾನು ಮನೆ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿಕೊಂಡು ಬಂದಿದ್ದೇನಂತೆ. ಹೋಗ್ತಾ ಬಾಗಿಲು ತೆರೆದುಕೊಟ್ಟುಹೋಗಿ ಪ್ಲೀಸ್” ಅಂದ.
ಸರಿ ಅಂತ ಅವರ ಮನೆಯ ಕಡೆಗೆ ಹೋದೆ.
ಬಾಗಿಲು ತೆರೆದು ಒಳಗಡಿಯಿಡುವಾಗ ಅಲ್ಲಿ ನನಗೆ ಪರಿಚಯವಿಲ್ಲದ ಓರ್ವ ಮಹಿಳೆ ಕೂತಿದ್ದರು.
ಆಕೆ ಸುಮಾರು ಐವತ್ತೈದರಿಂದ ಅರವತ್ತು ವರುಷ ಪ್ರಾಯದ ಮಹಿಳೆ.
ನನ್ನ ಹೆಸರು ಆಕೆಗೆ ಗೊತ್ತಿಲ್ಲ. ಆಕೆಗೆ ಹೆಸರು ನನಗೆ ಗೊತ್ತಿಲ್ಲ.
ಅವರು ಹಿಂದಿನ ದಿನ ಅಲ್ಲಿಗೆ ಅತಿಥಿಯಾಗಿ ಬಂದ್ದಿದ್ದವರಂತೆ.
ಪರಿಚಯ ಮಾಡಿಕೊಳ್ಳುವ ಯತ್ನದಲ್ಲಿ “ನಮಸ್ಕಾರ ಅಮ್ಮ” ಅಂದೆ.
“ನಮಸ್ಕಾರ… ಅಮ್ಮ ಅಂದೀಯಲ್ಲಾ, ನೀನೂ ನಂಗೆ ಮಗನೇ ಕಣಯ್ಯಾ ಇನ್ ಮೇಲೆ” ಅಂದರು.
“ಅದು ಸರಿ, ನಾನು ಯಾರು ಅಂತ ನಿಮಗೆ ಗೊತ್ತಾ?” ಎಂದು ಕೇಳಿದೆ.
“ನೀನು ಯಾರಾದರೇನು. ನನ್ ಮಗ ಅಂತ ಅದ್ನಲ್ಲಾ ನಾನು. ನೀನು ದೇವರನ್ನು ನಂಬುತ್ತೀ ಕಣಯ್ಯಾ. ಆದರೆ ಪೂಜೆ ಗೀಜೆ ಮಾಡೋಲ್ಲ. ದೇವರಿಗೆ ಕೈ ಮುಗಿಬೇಕೋ ಕೈ ಮುಗೀಬೇಕು, ದೊಡ್ಡವರಿಗೆ ಬೆಲೆ ಕೊಡಬೇಕೋ ಬೆಲೆ ಕೊಡಬೇಕು. ಅದನ್ನು ಬೇರೆಯವರು ನೋಡಲಿ ಅಂತ ಮಾಡಲ್ಲ. ಬಣ್ಣ ಗಿಣ್ಣ ಇಲ್ಲ, ನೀನು ಬಣ್ಣದ ಮನುಷ್ಯ ಅಲ್ಲ ಕಣಯ್ಯಾ”.
ಒಂದೇ ಸಮನೆ ನುಡಿಯತೊಡಗಿದರು.
ಈ ಮಹಿಳೆಯಲ್ಲಿ ಏನೋ ವಿಶೇಷ ಜ್ಞಾನ ಇದೆ ಎಂಬ ಅರಿವಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ ನನಗೆ.
ಕೂಡಲೇ ನಾನು ಒಂದು ಪ್ರಶ್ನೆ ಮಾಡಿದೆ
“ನನ್ನನ್ನು ನಂಬಬಹುದಾ ಜನರು?”
“ನಿನ್ನನ್ನು ನಂಬಲ್ಲಾ ಜನರು”
“ನನ್ನನ್ನು ನಂಬಬಾರದಾ?”
“ಅಲ್ಲ ಕಣಯ್ಯಾ, ನಂಬಬಾರದು ಅಂತ ಹೇಳ್ತಾ ಇಲ್ಲ, ನಾನು. ಆದರೆ ನಿನ್ನನ್ನು ನಂಬಲ್ಲ ಜನರು”.
“ಯಾಕೆ?”
“ಯಾಕಂದರೆ ನೀನು ಒರಿಜಿನಲ್ ಅಲ್ವಾ? ಡುಪ್ಲಿಕೇಟ್ ಆಗಿದ್ರೆ ನಂಬುತ್ತಿದ್ದರು. ಎಲ್ಲರೂ ಮಾಡಿದ್ದನ್ನು ನೀನು ಮಾಡೋ ತರಹ ಡುಪ್ಲಿಕೇಟ್ ಆಗಿದ್ರೆ ನಂಬುತ್ತಿದ್ದರು. ಏನಾದರೂ ಮಾಡಿದ್ರೆ ಹಾಗೆ ಮಾಡ್ಬಾರ್ದು, ಹೀಗೆ ಮಾಡ್ಬಾರ್ದು ಅಂತೀಯಲ್ಲಾ, ಅದಕ್ಕೆ ಜನ ನಿನ್ನನ್ನು ನಂಬಲ್ಲ”.
ಹೀಗೆಯೇ ನನ್ನ ಬಗ್ಗೆ ಸುಮಾರು ಮೂವತ್ತು ನಿಮಿಷ ಮಾತನಾಡಿದರು.
“ನಾನು ಕೇವಲ ಮೂರನೇ ಕ್ಲಾಸ್ ಫೇಲ್” ಅಂತ ಅಂದಿದ್ದ ಆಕೆ, ಅಂದು ನನ್ನ ಬಗ್ಗೆ ಆಡಿದ ಮಾತುಗಳಲ್ಲಿ ಒಂದು ಕೂಡ “ಹಾಗಲ್ಲ ಅಥವಾ ಅದು ಸರಿಯಲ್ಲ” ಅನ್ನುವಂತಿರಲೇ ಇಲ್ಲ.
“ನಮ್ ಮನೆಗೆ ಬಾರಯ್ಯಾ ಶಿವಮೊಗ್ಗಕ್ಕೆ ಬಂದಾಗ… ನನ್ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತೇ ನಿನಗೆ” ಅಂದಿದ್ದರು.
ಎಂಟರಂದು ನಾನು ಉಡುಪಿಗೆ ತೆರಳಿದ್ದೆ. ಅವರು ಹದಿಮೂರಕ್ಕೆ ಶಿವಮೊಗ್ಗಕ್ಕೆ ತೆರಳಿದ್ದರು.
ಹದಿನಾಲ್ಕರಂದು ಕರೆಮಾಡಿ ಮಾತಾಡಿದ್ದೆ.
ಕಾರಿನಲ್ಲಿ ಬೆಂಗಳೂರಿಗೆ ಮರಳುವಾಗ ಶಿವಮೊಗ್ಗ ದಾರಿಯಾಗಿ ಬಂದು ತಮ್ಮ ಮನೆಗೆ ಬರುತ್ತೇನೆ ಅಂದಿದ್ದೆ.
“ಸರಿ ಕಣಯ್ಯಾ ನನಗೂ ಖುಷಿಯಾಗುತ್ತೆ ಬಾ” ಅಂದಿದ್ದರು.
ಅವರ ಹೆಸರು ಶೈಲಜಮ್ಮ.
ಕಳೆದ ಸೋಮವಾರ ಮುಂಜಾನೆ ಒಂಬತ್ತು ಘಂಟೆ ಸುಮಾರಿಗೆ ನನಗೊಂದು ಕರೆಬಂತು.
ಎರಡುದಿನಗಳ ಹಿಂದೆ ತನ್ನ ನಾದಿನಿ ನಿಧನರಾದ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಚನ್ನಗಿರಿಗೆ ಹೋಗಿದ್ದ ಶೈಲಜಮ್ಮ, ಸೋಮವಾರ ಮುಂಜಾನೆ ಏಳು ಘಂಟೆಗೆ ಚನ್ನಗಿರಿಯಲ್ಲೇ ಹಠಾತ್ ಹೃದಯಾಘಾತವಾಗಿ ನಿಧನರಾಗಿಬಿಟ್ಟಿದ್ದಾರೆ ಎಂಬ ಸುದ್ದಿಯೂ ಬಂತು.
ಬೆಂಗಳೂರಿನಲ್ಲಿ ದಶಂಬರ ಏಳರಂದು ನಡೆದಿದ್ದ ನಮ್ಮ ಆ ಮೊದಲ ಭೇಟಿ, ನಮ್ಮೀರ್ವರ ಕೊನೆಯ ಭೇಟಿಯೂ ಆಗಿತ್ತು.
ಹಾಗಾದರೆ ಆ ಭೇಟಿ ಯಾಕೆ ಆಗಿತ್ತು?
ನನ್ನ ಸ್ನೇಹಿತರ ಮಗ, ಹಿಂದೆಂದೂ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿಕೊಂಡು ಹೋಗದವನು ಅಂದು ಯಾಕೆ ಹಾಗೆ ಮಾಡಿದ್ದ?
ನನಗಿನ್ನೂ ಉತ್ತರ ಸಿಕ್ಕಿಲ್ಲ.
ವಿಚಿತ್ರ ಅನಿಸುತ್ತದೆ. ಅಲ್ಲವೇ?