ಸಖೀ,
ಮಾತಾದರೇನು
ಮೌನವಾದರೇನು
ಭಾವಾಭಿವ್ಯಕ್ತಿ ಮುಖ್ಯ;
ತಮ್ಮ ವೈಫಲ್ಯಕ್ಕೆ
ಅನ್ಯರನು ದೂರಿದರೆ
ಮುರಿದೀತು ನಡುವಿನ ಸಖ್ಯ!
#ಆಸುಮನ
ಸಖೀ,
ಮಾತಾದರೇನು
ಮೌನವಾದರೇನು
ಭಾವಾಭಿವ್ಯಕ್ತಿ ಮುಖ್ಯ;
ತಮ್ಮ ವೈಫಲ್ಯಕ್ಕೆ
ಅನ್ಯರನು ದೂರಿದರೆ
ಮುರಿದೀತು ನಡುವಿನ ಸಖ್ಯ!
#ಆಸುಮನ
ಸಖೀ,
ಸಂಯಮ ಕಾಯ್ದುಕೊಳ್ಳಿ
ಸಂಯಮ ಕಾಯ್ದುಕೊಳ್ಳಿ
ಎನ್ನುತ್ತಿರುವವರೇ ಎಲ್ಲರೂ;
ಅಂಥ ತಪಸ್ವಿ ವಿಶ್ವಾಮಿತ್ರನೇ
ಸೋತು ಮೈಮರೆತಿದ್ದನಂತೆ
ಇನ್ನು ಎಲ್ಲಿ ಈ ಹುಡುಗರು?
ಕಡಿವಾಣ ಹಾಕಲೇಬೇಕು
ಬೇಕಾಬಿಟ್ಟಿ ಬಾಳುವುದಕ್ಕೆ
ಹುಡುಗರೂ ಹುಡುಗಿಯರೂ!
#ಆಸುಮನ
ಸಖೀ,
ನೀನು ಹೇಗಿರುವೆ ಎಂದು
ನಾನು ಬೇರೆ ಯಾರನ್ನೂ ಕೇಳಲಾಗದು,
ನಮ್ಮನ್ನು ಬಿಟ್ಟರೆ ಇನ್ನಾರಿಂದಲೂ
ನೀನು ಹೇಗಿರುವೆ ಎಂದು ಅರಿಯಲಾಗದು;
ನೀನು ನಕ್ಕರೂ ನಗುವಿನ ಹಿಂದಿನ
ನಿನ್ನ ನೋವನ್ನು ನಾನಷ್ಟೇ ಅರಿಯಬಲ್ಲೆ,
ನೀನು ಅತ್ತರೆ ನಿನ್ನ ಅಳುವಿನ ಹಿಂದಿನ
ನೋವಿನ ಆಳವನ್ನೂ ನಾನಷ್ಟೇ ಗ್ರಹಿಸಬಲ್ಲೆ!
ಸಖೀ,
ನನ್ನ ಹಸ್ತದೊಳಗೆ ನಿನ್ನ ಹಸ್ತ ಇರಿಸಿದಾಗ
ನಮ್ಮ ಹೃದಯಗಳು ಕರಗುವವೇಕೆ?
ನಿನ್ನ ಕೆನ್ನೆಯ ಮೇಲೆ ಮುತ್ತನ್ನೊತ್ತುವಾಗ
ನಿನ್ನ ಕಂಗಳು ತುಂಬಿ ಬರುವವೇಕೆ?
ಯಾರತ್ತಲೋ ಹೂಡಿದ ಬಾಣ ತಾಕಿದ್ದು ನನ್ನ ಎದೆಯನ್ನು
ನೋವಿಗೂ ಮಿತಿ ಇದೆ, ನೋವೇ ಆದ ಹಾಗಿಲ್ಲ ನನಗಿನ್ನೂ!
ಸಖೀ,
ನಿನ್ನೊಳಗೆ ಇರುವಷ್ಟೇ ಕೊರಗು ಇಲ್ಲಿ ನನ್ನೊಳಗೂ ಇದೆ,
ಬಿಡುವಿಲ್ಲದ ದಿನಚರಿಯಿಂದ ಈ ಮನ ರೋಸಿ ಹೋಗಿದೆ,
ಯಾವುದರ ನಿರೀಕ್ಷೆ, ಎತ್ತ ಈ ಪಯಣ ಅರಿಯದಾಗಿದೆ,
ಮಾತುಕತೆಯಿಲ್ಲ ಸಂಪರ್ಕ ಸಂದೇಶಕ್ಕೆ ಸೀಮಿತವಾಗಿದೆ,
ಸಂದೇಶಗಳ ರವಾನೆಗೂ ಸಾಕಷ್ಟು ಪುರುಸೊತ್ತು ದಕ್ಕುತ್ತಿಲ್ಲ,
ಎಲ್ಲಾದರೂ ಹೋಗೋಣ ಎಂದು ಮನ ಅನ್ನುತಿಹುದಲ್ಲಾ?
ಅಂಟಿಕೊಂಡಿದ್ದಷ್ಟೂ ಅಂಟಾಗುತ್ತದೆ ಬಿಡಿಸಿಕೊಳ್ಳಲು ಕಷ್ಟ,
ಹೇಳಿಬಿಡು ನೋಡೋಣ ನಿನ್ನ ಮನಸಿಗೆ ಯಾವುದು ಇಷ್ಟ!
ಸಖೀ,
ನದಿಯ ಹಾಗೆಯೇ ಇದೆ ನಮ್ಮೀ ಬಾಳು
ಆತನನು ಸೇರುವವರೆಗೂ ದಿನಾ ಗೋಳು,
ಹತ್ತಾರೂರು ಗುಡ್ಡ ಕಣಿವೆಗಳನು ಸುತ್ತಾಡಿ
ಆತನನೇ ಸೇರುವುದೀ ದೇಹಾತ್ಮದ ಜೋಡಿ;
ದೇಹವ ತೊರೆದಾತ್ಮ ಪರಮಾತ್ಮನಲಿ ಲೀನ,
ಮಣ್ಣಿನ ಈ ದೇಹ ಮತ್ತೆ ಮಣ್ಣಲ್ಲೇ ವಿಲೀನ;
ಹುಟ್ಟು ಸಾವಿನ ನಡುವೆ ಬರಿಯ ಹಾರಾಟ
ಫಲವ ತಿನ್ನಲಾಗದಿದ್ದರೂ ಸದಾ ಹೋರಾಟ!
ಸಖೀ,
ಸದಾ ನಿನ್ನನ್ನೇ ಹಿಂಬಾಲಿಸುತ್ತಿರುವ ನನಗೆ
ನನ್ನ ಗೋಜೂ ಇರುವುದಿಲ್ಲ ಒಮ್ಮೊಮ್ಮೆ,
ನನ್ನತ್ತ ನಾನೇ ಗಮನಹರಿಸಿಕೊಳ್ಳಲೆಂದೇ
“ಸೆಲ್ಫೀ”ಯ ಮೊರೆಹೋಗುವೆ ಕೆಲವೊಮ್ಮೆ!
ಸಖೀ,
ದೇಶಕ್ಕಾಗಿ ಬಲಿಯಾಗುವುದಕ್ಕೂ ಅದೃಷ್ಟವಿರಬೇಕು,
ಅದನ್ನು ನಾವು ಮೊದಲೇ ಬರೆಸಿಕೊಂಡೇ ಬಂದಿರಬೇಕು,
ಬಲಿಯಾದವರನ್ನಷ್ಟೇ ಕೊಂಚಕಾಲ ಸುದ್ದಿಯಾಗಿಸುತ್ತಾರೆ,
ನಾಡಿನ ಉದ್ದಗಲಕ್ಕೂ ಜನರೆಲ್ಲರೂ ಕೊಂಡಾಡುತ್ತಿರುತ್ತಾರೆ,
ಬಲಿಯಾಗದೇ ಉಳಿದವರನ್ನು ಇಲ್ಲೆಲ್ಲರೂ ನಿರ್ಲಕ್ಷಿಸುತ್ತಾರೆ,
ಅವರನ್ನು ಪಿಂಚಣಿಗಾಗಿ ವರುಷಗಟ್ಟಳೆ ಧರಣಿ ಕೂರಿಸುತ್ತಾರೆ!