ಹತ್ತಿರ ನಿಂತು ಮಾತಾಡಿಸಿದರೆ ಮರಳಿ ಮಾತೇ ಇಲ್ಲ. ಕಣ್ಣುಗಳಿಂದ ಬರೀ ಕಣ್ಣೀರ ಧಾರೆ. ಸರಿ ನೀನು ಮನೆಗೆ ಹೋಗಿರು. ನಾನು ಶಾಲೆಗೆ ಹೋಗಬೇಕು. ಸಾಯಂಕಾಲ ಬರ್ತೇನೆ ಎಂದು ಹೇಳಿ ಕಳುಹಿಸಿದ್ದೆ. ನಾನು ಶಾಲೆಗೆ ಹೋದರೂ ಹಗಲಿಡೀ ಕೆಂಪಿಯದೇ ಯೋಚನೆಗಳು. ಸಂಜೆ ತನಕ ಇರ್ತಾಳೋ ಇಲ್ವೋ? ನಮ್ಮನ್ನೆಲ್ಲಾ ಬಿಟ್ಟು ಹೋದವಳು ಹೀಗೆ ಹಠಾತ್ ಮರಳಿದ್ದೇಕೆ? ಇನ್ನು ನಮ್ಮ ಮನೆಯಲ್ಲೇ ಉಳಿಯುತ್ತಾಳೋ?
ಸಾಯಂಕಾಲ ಶಾಲೆ ಮುಗಿದ ಮೇಲೆ, ಮೂರು ಮೂರೂವರೆ ಕಿಲೋಮೀಟರುಗಳಷ್ಟು ದೂರದಲ್ಲಿದ್ದ ನಮ್ಮ ಮನೆಯನ್ನು ತಲುಪಲು ಮುಕ್ಕಾಲು ಗಂಟೆ ಬೇಕಾಗುತ್ತಿತ್ತು. ಜಾಸ್ತಿ ವೇಗವಾಗಿ ನಡೆಯಲೂ ಭಯ. ಮಧ್ಯಾಹ್ನ ಶಾಲೆಯಲ್ಲಿ ತಿಂದಿದ್ದ ಅಮೇರಿಕನ್ ಉಪ್ಪಿಟ್ಟು ಅದಾಗಲೇ ಜೀರ್ಣವಾಗಿದ್ದು, ಅದು ತನ್ನ ಕರಾಮತ್ತು ತೋರಿಸಿ ಬಿಡಬಹುದೆಂಬ ಅನುಮಾನ ಇರುತ್ತಿತ್ತು.
ಮನೆಗೆ ಬಂದರೆ ಕೆಂಪಿ ಇಲ್ಲ. ಅಮ್ಮನಲ್ಲಿ ಕೇಳಿದೆ. ಕೆಂಪಿ ಬಂದಿದ್ದು ಹೌದು. ಬಾಯಾರಿಕೆ ನೀಡಿದೆ. ಕುಡಿದಳು. ಆಮೇಲೆ ನಿನ್ನ ಅಪ್ಪಯ್ಯ ಅವರಿಗೆ ವಿಷಯ ತಿಳಿಸಿದ್ದರಿಂದ, ಅವರೇ ಬಂದು ಕರೆದುಕೊಂಡು ಹೋದರು.
ಏನು ಮಾಡಬಹುದಾಗಿತ್ತು ನಾನು. ಅಳು ಬಂತು. ಮನಸಾರೆ ಅತ್ತೆ. ಅಂದಿನ ದಿನದಿಂದ ಈ ನಡುವಿನ ಇಷ್ಟೊಂದು ವರುಷಗಳಲ್ಲಿ ಹಲವುಬಾರಿ ನೆನಪಾಗಿ ಕಾಡಿದ್ದಾಳೆ ಕೆಂಪಿ. ಅಳಿಸಿದ್ದಾಳೆ. ಈಗೀಗ ಅಳುವಿಲ್ಲವಾದರೂ ನೆನಪಾದಾಗ ಹೃದಯ ಭಾರವಾಗುವುದಂತೂ ನಿಜ.
ನಾನು ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರದ ಅಂಜಾರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ಸಮಯ ಅದು. ಆಗ ನನಗೊಂದು ಭಯಂಕರ ಖಾಯಿಲೆ ಕಾಡಿತ್ತು. ಸುಮಾರು ಏಳೆಂಟು ತಿಂಗಳು ನಾನು ಶಾಲೆಗೇ ಹೋಗಿಲ್ಲ. ನಮ್ಮ ಮೂರನೇ ತರಗತಿಯ ಬಗ್ಗೆ ನನಗೆ ಅಷ್ಟೊಂದು ನೆನಪು ಉಳಿದಿಲ್ಲದಿರಲು ಇದೇ ಕಾರಣ. ಆದರೂ ಭಡ್ತಿ ಸಿಕ್ಕಿತ್ತು ಆ ಮಾತು ಬೇರೆ. ಲಿವರ್ ಸಮಸ್ಯೆಯಿಂದಾಗಿ, ಮೈಯೆಲ್ಲಾ ಊತ ಉಂಟಾಗಿತ್ತು. ಉಪ್ಪು ಮತ್ತು ಖಾರ ತಿನ್ನುವಂತಿರಲಿಲ್ಲ. ಉಪ್ಪಿನಕಾಯಿಯ ಡಬ್ಬ ಕೈಗೆ ಸಿಕ್ಕರೆ ಕದ್ದು ತಿನ್ನುತ್ತಿದ್ದೆ. ನಿರ್ಬಂಧವಿದ್ದ ವಸ್ತುಗಳ ಮೇಲೆ ನನಗೆ ಅತೀವ ಆಸೆ ಆಗ. ಉಪ್ಪಿನಕಾಯಿ ಡಬ್ಬವನ್ನು ನನ್ನ ಕೈಗೆ ಸಿಗದಂತೆ, ಮೇಲೆ ಎಲ್ಲೋ ಅಡಗಿಸಿ ಇಡುತ್ತಿದ್ದರು. ನನ್ನಿಂದಾಗಿ ಮನೆಯವರೆಲ್ಲರಿಗೂ ಒಂದು ರೀತಿಯಲ್ಲಿ ಕಷ್ಟ. ನಾನು ತಿನ್ನಲಾಗದ ತಿನಿಸನ್ನು ಅವರು ತಿನ್ನುವಾಗ ಅವರಿಗೆಲ್ಲಾ ಬೇಸರ.
ವೈದ್ಯರಾಗಿದ್ದ ಅಪ್ಪಯನ್ನವರೂ ಕೈಸೋತಿದ್ದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಆಯುರ್ವೇದ ಆಸ್ಪತ್ರೆ, ಅಲ್ಲದೇ ಇನ್ನೂ ಅದೆಷ್ಟೋ ನಾಟಿ ವೈದ್ಯರುಗಳ ಔಷಧಿಗಳನ್ನು ಪ್ರಯೋಗಿಸಿದರೂ ಗುಣಮುಖ ನಾಗಿರಲಿಲ್ಲ. ನನ್ನ ಆಸೆಯನ್ನು ಕೈಬಿಡುವಂತೆ ವೈದ್ಯರುಗಳೇ ಸೂಚಿಸಿದ್ದರು. ಆ ದಿನದ ನಂತರ ಅಪ್ಪಯ್ಯ ನನಗೆ ಕದ್ದು ಮುಚ್ಚಿ ಮಸಾಲೆ ದೋಸೆ ತಂದು ತಿನ್ನಿಸಿದ್ದೂ ಇದೆ. ಅಮ್ಮ ಅದರಿಂದ ಕೊರಗಿದ್ದೂ ಇದೆ. ಆಗಿನ ದಿನಗಳಲ್ಲಿ, ನನ್ನನ್ನು ಖುಷಿಯಾಗಿ ಇರಿಸಲು, ರಾತ್ರಿ ಕ್ಲಿನಿಕಿನಿಂದ ಮರಳಿದ ಮೇಲೆ, ನನಗೆ ಒಂದು ರೂಪಾಯಿಯ ಪಾವಲಿ ನೀಡುವ ಅಭ್ಯಾಸ ಮಾಡಿಕೊಂಡಿದ್ದರು ಅಪ್ಪಯ್ಯ. ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ಭದ್ರವಾಗಿ ಶೇಖರಿಸಿ ಇಡುತ್ತಿದ್ದೆ ನಾನು.
ಒಂದು ದಿನ ಅದ್ಯಾವುದೋ ಹಾರ್ಮೋನಿಯಂ ಮಾಸ್ಟರರೊಬ್ಬರು ನಮ್ಮ ಮನೆಗೆ ಬಂದಿದ್ದರು. ನನ್ನ ಖಾಯಿಲೆಯ ಬಗ್ಗೆ ತಿಳಿದ ಅವರು ಪಾಣಾಜೆಯಲ್ಲಿನ ಆಯುರ್ವೇದ ಪಂಡಿತರೋರ್ವರ ಹೆಸರನ್ನು ಸೂಚಿಸಿ, ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಲು ಹೇಳಿದ್ದರು. ಆ ಪಂಡಿತರು, ಈಗಿನ ಖ್ಯಾತ ಪತ್ರಕರ್ತ ಶೀ ಈಶ್ವರ ದೈತೋಟರ ತೀರ್ಥರೂಪರು. ಅವರಲ್ಲಿಗೆ ನಾಲ್ಕಾರು ಭೇಟಿ ನೀಡಿ, ಅವರು ನೀಡಿದ ಔಷಧಿ ಸೇವಿಸಿ ನಾನು ಅಂದು ಮರುಜನ್ಮ ಪಡೆದಿದ್ದೆ. ನನಗೆ ಮರುಜನ್ಮ ನೀಡಿದವರು ಈಶ್ವರ ದೈತೋಟರವರ ತೀರ್ಥರೂಪರು.
ವಿಷಯ ಅದಲ್ಲ.
ನಾನು ಗುಣಮುಖನಾದ ನಂತರ, ನಾನು ಒಟ್ಟುಗೂಡಿಸಿದ್ದ, ಆ ಒಂದು ರೂಪಾಯಿಯ ಪಾವಲಿಗಳನ್ನು ಲೆಕ್ಕ ಹಾಕಿ ನೋಡಿದರೆ, ಸುಮಾರು ಇನ್ನೂರೈವತ್ತು ರೂಪಾಯಿಗಳಾಗಿದ್ದವು. ನಮ್ಮ ಅಪ್ಪಯ್ಯ, ಆ ದುಡ್ಡನ್ನು ತೆಗೆದುಕೊಂಡು ನನಗೊಂದು ಹಸುವನ್ನು ಖರೀದಿಸಿ ನಮ್ಮ ಹಟ್ಟಿಯಲ್ಲಿ ಕಟ್ಟಿದ್ದರು. ಆ ಹಸುವೇ ಕೆಂಪಿ. ಆಕೆ ನನ್ನ ಬಾಲ್ಯದ ಸಂಗಾತಿಯಾಗಿ ಬಿಟ್ಟಿದ್ದಳು.
ಆಕೆಯ ಸಕಲ ಆರೈಕೆ ನನ್ನದೇ. ಹಿರಿಯರ ಲೆಕ್ಕಾಚಾರ ನನ್ನ ಅರಿವಿಗೆ ಬಂದಿರಲೇ ಇಲ್ಲ. ಹಟ್ಟಿಯಲ್ಲಿರುವ ಆ ಹಸು ನನ್ನದಾಗುವುದು ಹೇಗೆ ಅನ್ನುವ ಪ್ರಶ್ನೆಯೇ ಎದ್ದಿರಲಿಲ್ಲ. ಹೊಲಗಳ ಅಂಚಿನಲ್ಲಿ ಬೆಳೆಯುವ ಹಸಿಹುಲ್ಲನ್ನು ತಂದು ಕೆಂಪಿಗೆ ತಿನ್ನಿಸುವ ಕೆಲಸವೂ ನಡೆಯುತ್ತಿತ್ತು. ಎರಡು ಮೂರು ವರುಷ ನಮ್ಮೊಂದಿಗೆ ಇದ್ದ ಕೆಂಪಿಯನ್ನು, ಒಂದು ದಿನ ನನಗೆ ತಿಳಿಸದೇ, ನನ್ನನ್ನು ಕೇಳದೇ ಮಾರಿಬಿಡಲಾಗಿತ್ತು. ಮನೆಯಿಂದ ದೂರದ ಒಂದು ಕೊಯ್ಲು ಎನ್ನುವ ಹೊಲದಲ್ಲಿ ಕೂಳೆ ಕೀಳಲು ಹೋಗಿದ್ದಾಗ, ಇತ್ತ ಕೆಂಪಿಯ ವ್ಯವಹಾರ ನಡೆಸಿ, ಹಿರಿಯಡಕದ ಲಕ್ಷ್ಮಣ ಆಚಾರಿ ಅನ್ನುವವರ ಮನೆಗೆ ಕರೆದೊಯ್ಯಲಾಗಿತ್ತು.
ಭತ್ತದ ಪೈರಿನ ಕಟಾವು ಆದನಂತರ ಹೊಲದಲ್ಲಿ ಉಳಿದಿರುವ ಅದರ ಬುಡವನ್ನು ಕೂಳೆ ಅನ್ನುತ್ತೇವೆ. ಅವುಗಳನ್ನು ಕಿತ್ತು ತಂದು ಹಸುಗಳಿರುವ ಹಟ್ಟಿಯಲ್ಲಿ ಹಾಸಲಾಗುತ್ತಿತ್ತು. ಹಾಗೆ ಅಂದು ಕೂಳೆ ಕಿತ್ತುಕೊಂಡು ಮರಳಿದಾಗ, ಹಟ್ಟಿಯಲ್ಲಿ ಕೆಂಪಿ ಇರಲಿಲ್ಲ. ಅಂದು ನಾನು ಅತ್ತು ಸುರಿಸಿದ ಕಣ್ಣೀರಿಗೆ ಕೊನೆಯಿರಲಿಲ್ಲ. ಬೇರೆ ಹಸು ಕೊಂಡಾಗ ಅದು ನಿನಗೇ ಕೊಡ್ತೇವೆ ಅನ್ನುವ ಅಮ್ಮನವರ ಸಮಾಧಾನದ ನುಡಿಗಳು ಅಂದು ವಿಫಲವಾಗಿದ್ದವು. ಆಮೇಲೆ ಮತ್ತೊಂದು ಹಸು ಬಂತು. ಹೋಯ್ತು. ಆದರೆ ಕೆಂಪಿಯಷ್ಟು ಆಪ್ತವಾಗಿದ್ದಿಲ್ಲ ಯಾರೂ.
ಅದಾಗಿ ಮೂರು ನಾಲ್ಕು ದಿನಗಳ ನಂತರ, ನಾನು ಹಿರಿಯಡಕದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಹಾದಿಯಲ್ಲಿ ನನಗೆ ಎದುರಾಗಿ ಕಣ್ಣೀರು ಸುರಿಸಿದ್ದ ಕೆಂಪಿ, ಆಗಾಗ ನನಗೆ ನೆನಪಾಗುವುದರಲ್ಲಿ ಅರ್ಥವಿಲ್ಲವೇ ಹೇಳಿ.
(ಕಾಗುಣಿತಗಳ ತಪ್ಪುಗಳು ಇರುವ ಸಾಧ್ಯತೆ ಇದೆ. ದಯವಿಟ್ಟು ತಿಳಿಸಿ ಉಪಕರಿಸಿ)
Posted by ಆತ್ರಾಡಿ ಸುರೇಶ ಹೆಗ್ಡೆ