ಸಖೀ
ಏಕಾಂತದಲ್ಲಿದ್ದಾಗ
ನಮ್ಮ ಮನದಲೇಳುವ
ಭಾವನೆಗಳ ಅಲೆಗಳನು
ಸ್ವತಂತ್ರವಾಗಿರಲು
ಬಿಟ್ಟುಬಿಡೋಣ
ಗರಿಗೆದರಿ ಹಾರಲಿಚ್ಚಿಸುವ
ಬಯಕೆಗಳ ಹಕ್ಕಿಗಳನು
ನಮ್ಮ ಕಲ್ಪನೆಯ ಆಗಸದಲಿ
ಹಾರಬಿಡೋಣ
ನಿಜಕ್ಕೂ ಅದರಿಂದೊಂದು
ತೆರನಾದ ಆನಂದವಾಗುತ್ತದೆ
ಯಾವುದೇ ಭಯಾತಂಕಗಳಿಲ್ಲದೇ
ಸ್ವಚ್ಚಂದವಾಗಿ, ಎಲ್ಲೆ ಮೀರಿ
ಸುತ್ತಿ ಬರುವ ಆ ಹಕ್ಕಿಗಳು
ನಮ್ಮ ಮನಕೆ ಮುದ ನೀಡುತ್ತವೆ
ನಮ್ಮದೇ ಕಲ್ಪನಾ ಲೋಕ
ನಮಗಿಷ್ಟವಾದ ಜನರೇ
ಅಲ್ಲಿ, ನಮ್ಮ ಸುತ್ತ ಮುತ್ತ
ಅಲ್ಲಿ ಕೇಳಿ ಬರುತ್ತವೆ
ನಮಗಿಷ್ಟವಾದ
ಮಾತುಗಳೇ ಅತ್ತ – ಇತ್ತ
ಒಂದೆಡೆ ವಿರಹದ
ನೋವಿದ್ದರೂ ಆಗ
ಅದೆಂತಹ ಆನಂದ
ಆದರೆ ಮಿಲನದಲಿ
ನಮಗೆ ಬರೇ
ಭಯ – ಆತಂಕಗಳಲ್ಲದೇ
ಎಲ್ಲಿದೆ ಆನಂದ?
ಮುಖಾಮುಖಿಯಾದಾಗ
ಒಬ್ಬರನ್ನೊಬ್ಬರು ಮನಸಾರೆ
ನೋಡಲಿಚ್ಚಿಸುವ ಕಣ್ಣುಗಳಿಗೆ
ಸದಾ ಇರುತ್ತದೆ ಈ ಸಮಾಜದ
ಹದ್ದು ಕಣ್ಣುಗಳ ಭಯ
ಮನಬಿಚ್ಚಿ ಮಾತನಾಡಲು
ಇಚ್ಚಿಸುವ ನಮ್ಮ
ನಾಲಿಗೆಗಳಿಗೆ, ಕಿವಿಗಳಾಗಿ,
ನಮ್ಮ ಮಾತುಗಳನಾಲಿಸುವ
ಸುತ್ತಲಿನ ಗೋಡೆಗಳ ಭಯ
ನಿಜ ನುಡಿಯಲೇ ಸಖೀ
ಇದೇ ವಾಸ್ತವ
ಇದೇ ನಿತ್ಯ ಸತ್ಯ
ಇಂದೂ – ಮುಂದೆಂದೂ!
**************