ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,
ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು,
ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,
ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು,
ಎದ್ದು ನಡೆ, ನೀ ಒದ್ದು ನಡೆ ಬಂಧನದ ಗೋಡೆಗಳ,
ಸದಾ ತೆರೆದಿಟ್ಟುಕೊಂಡಿರು, ನಿನ್ನ ಈ ಕಣ್ಣು ಕಿವಿಗಳ,
ಆತ್ಮಕ್ಕೆ ಪರಮಾತ್ಮನ ಆಸರೆಯೊಂದೇ ಶಾಶ್ವತವು,
ಪರಮಾತ್ಮ ಹೊರಗಿಲ್ಲ, ಬೇಕು ಇದನರಿವ ಮನವು,
ಇಲ್ಲಿ ಸಿಕ್ಕ ಸಿಕ್ಕವರೆಲ್ಲಾ ತೋರಬಹುದು ಅನುಕಂಪ,
ಮಧುರ ಮಾತುಗಳಿಂದ ನಿನ್ನ ಮನಕೆ ನೀಡಿ ತಂಪ,
ನಿನ್ನ ಬುದ್ದಿಯು ಚಂಚಲ ಮನಸಿನ ಬಂಧಿ ಆಗದಿರಲಿ,
ಆ ಮನಸ್ಸು ಸದಾ ಇರಲಿ ನಿನ್ನ ಬುದ್ಧಿಯ ಹಿಡಿತದಲಿ,
ತಪ್ಪು ಒಪ್ಪುಗಳ ವಿಮರ್ಶಾ ಶಕ್ತಿಯು ಬೆಳೆಯುತಿರಲಿ,
ಅದಕ್ಕಾಗಿ ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ,
ಬುದ್ಧಿಯನು ಒರೆಗೆ ಹಚ್ಚುವ ವಿಚಾರ ವಿನಿಮಯ ಬೇಕು,
ಜ್ಞಾನಾರ್ಜನೆಯೂ ಈ ಜೀವನದ ಗುರಿ ಆಗಿದ್ದರೆ ಸಾಕು!
***************
ಪುಸ್ತಕದಿ ತೆರೆದರಿವು ಮಸ್ತಕದಿ ತೆರೆದ ಮಣಿ
ಎಂದಿತ್ತು ಮಹಾನ್ ಚೇತನ ಡಿವಿಜಿ ವಾಣಿ
ಸಜ್ಜನರಂತೆಯೇ ಸದ್ಗ್ರಂಥಗಳು, ಮೂಡಿಸಿ ಸದ್ವಿಚಾರಗಳ
ನಮ್ಮನ್ನು ಸನ್ಮಾರ್ಗದಲಿ ಕೊಂಡೊಯ್ಯುವ ದೀಪಗಳು.