ಮಣ್ಣಿನ ಪ್ರೇಮ ಚುನಾವಣೆಯಲಿ ಗೆಲುವ ತನಕ!!!

ಮಮತಾಳ ರೈಲು ಕರ್ನಾಟಕದಿಂದ ಕೇರಳದ ಕಡೆಗೆ
ಓಡುವುದೇಕೆ ಅನ್ನುವುದಕೇ ಅಲ್ಲ ನಮಗೀಗ ಚಿಂತೆ
ಬೆಂಗಳೂರು ಮಂಗಳೂರು ರೈಲು ಉತ್ತರಕ್ಕೆ ತಿರುಗಿ
ಕರ್ನಾಟಕದ ಕರಾವಳಿಯಲೇ ಮುಂದೆ ಸಾಗಬೇಕಿತ್ತಂತೆ

ಕರಾವಳಿಯ ಮತದಾರ ಕಾಂಗ್ರೇಸಿಗೆ ಮತ ನೀಡಿಲ್ಲ
ಎನ್ನುವುದರಿಂದ ಕಾಂಗ್ರೇಸಿಗರಿಗೆ ಮುನಿಸೇನೋ
ಹೀಗೆ ತಾರತಮ್ಯ ತೋರಿದರೆ ಮತದಾರ ಅವರಿಂದ
ಇನ್ನೂ ದೂರವಾಗುತ್ತಾನೆಂದವರು ಅರಿಯರೇನೋ

ಬೆಂಗಳೂರಿನಿಂದ ಹೊರಡುವ ರೈಲು ಇನೂ ಕಡಿಮೆ
ಸಮಯದಲಿ ಸಾಗಿ ಮಂಗಳೂರು ಸೇರಬೇಕಿತ್ತು
ಮೈಸೂರಿನ ದಾರಿ ಮರೆತು ಬೆಂಗಳೂರಿನಿಂದ
ಸೀದಾ ಸಕಲೇಶಪುರದ ಮೂಲಕ ಸಾಗಬೇಕಿತ್ತು

ಮೊಯ್ಲಿ, ಕೃಷ್ಣ, ಮುನಿಯಪ್ಪ, ಖರ್ಗೆ, ಇವರನ್ನೆಲ್ಲಾ
ನಮ್ಮವರೆಂದು ಕರೆದು ಸನ್ಮಾನ ಮಾಡಿಯಾಯ್ತು
ಸನ್ಮಾನ ಮುಗಿಸಿ ಹೋದವರು ಅಲ್ಲಿ ಮಮತಾಳ
ಆಯವ್ಯಯ ಪತ್ರಕ್ಕೆ ಖುಷಿಯಿಂದ ಮೇಜು ಕುಟ್ಟಿದ್ದಾಯ್ತು

ರಾಜಕೀಯವೇ ಹೀಗೆ ಇಲ್ಲಿ ನಮ್ಮವರೆಂಬವರೇ ಇಲ್ಲ
ಇದ್ದರೂ ಅವರು ನಮ್ಮವರಾಗಿಯೇ ಉಳಿಯುವುದಿಲ್ಲ
ಕನ್ನಡಿಗರ ನಾಡಿನಿಂದ ಕನ್ನಡಿಗರೇ ಚುನಾಯಿತರಾಗಿ
ಹೋದರೂ ಇಂದು ನಮಗೇನೂ ಲಾಭ ಆಗುತ್ತಲೇ ಇಲ್ಲ

ನಾಯಕರುಗಳ ಹೋರಾಟ ಭಾಷಾಭಿಮಾನ ಮಣ್ಣಿನ
ಮೇಲಿನ ಪ್ರೇಮ ಇವೆಲ್ಲಾ ಚುನಾವಣೆಯಲಿ ಗೆಲುವ ತನಕ
ಗೆದ್ದು ಹೊದ ಮೇಲೆ ಮರೆಯುತ್ತಾರೆ ಇತ್ತ ತಲೆ ಹಾಕದೇ
ಮುಖ ಕಾಣಿಸದೇ ಮುಂದಿನ ಮತದಾನದ ಬರುವನಕ

5 Responses to “ಮಣ್ಣಿನ ಪ್ರೇಮ ಚುನಾವಣೆಯಲಿ ಗೆಲುವ ತನಕ!!!”

  1. Athradi Says:

    ಪ್ರಕಾಶ್,
    ಆಸುಮನದ ಮಾತುಗಳು ಯಾವಾಗಲೂ ನೇರ, ಇಂದಲ್ಲ, ೩೨ ವರುಷಗಳ ಹಿಂದಿನಿಂದಲೂ.
    ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ಇನ್ನಿತರ ಪುಟಗಳ ಮೇಲೂ ಕಣ್ಣಾಡಿಸಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವಂತವರಾಗಿ.

  2. PRAKASH HEGDE Says:

    ನಮ್ಮ ರಾಜಕಾರಣಿಗಳೇ ಹಾಗೆ….
    ಅಭಿಮಾನವೇ ಇರುವದಿಲ್ಲವೆ..?

    ಒತ್ತಡ ಹಾಕಿ ಕೆಲಸ ಮಾಡಿಸಿಕೊಳ್ಳಲು ಇವರಿಗೆ ಬರುವದಿಲ್ಲ ಎಂದು…
    ನಮಗೆ ನಾವೆ ಕಿವಿಯಲ್ಲಿ ಹೂ ಇಟ್ಟು ಕೊಂಡು ಬಿಡೋಣ…

    ಕವನದ ನೇರವಂತಿಕೆ ಇಷ್ಟವಾಗುತ್ತದೆ …

    ಅಭಿನಂದನೆಗಳು…

  3. kannada premi Says:

    ಹೆಗ್ಡೆ ಅವರೇ.ನೀವು ಹೇಳೋದೇನೋ ಸರಿ. ಆಯವ್ಯಯದಲ್ಲಿ ಕರಾವಳಿ ,ಮಂಗಳೂರಿಗೆ ಪ್ರಾಮುಖ್ಯತೆ ಕೊಟ್ಟಿಲ್ಲ ಅಂತ. ಆದರೆ ನಾವು ಇಡೀ ಕರ್ನಾಟಕಕ್ಕೆ ಎಷ್ಟು ದಕ್ಕಿದೆ ಅಂತ ಇಣುಕಿ ನೋಡಿದರೆ, ಮಮತಾ ಅವರ ಆಯವ್ಯಯ ಈ ಲಾಲೂ ನಮ್ಮ ರಾಜ್ಯಕ್ಕೆ ಸತತ ೫ ವರ್ಷ ಮಾಡಿದ ಮೋಸ, ಅನ್ಯಾಯಕ್ಕಿಂತ ಪರವಾಗಿಲ್ಲ ಅಂತ ನನಗೆ ಅನಿಸಿತು. ಇನ್ನೂ ಬಹಳಷ್ಟ್ಟು ಬರಬೇಕು ನಿಜ. ಆದರೆ ಒಳ್ಳೇ ಆರಂಭವಂತೂ ಸಿಕ್ಕಿದೆ. ಮುಂದಿನ ೪ ಆಯವ್ಯಯದಲ್ಲಿ ನಮ್ಮ ಕರ್ನಾಟಕದ ೪ ಸಚಿವರುಗಳು ಸೇರಿ ನಮಗೆ ಇನ್ನು ಹೆಚ್ಚಿನ ರೈಲುಗಳು ಬರುವಂತೆ ಮಾಡಬೇಕು. ಇವರೂ ಸಹ ನಮ್ಮ ಅಂಬರೀಶ್ ಅವರಂತೆ ಬರೀ ಸಿನಿಮಾದಲ್ಲಿ ಬರೋ ನಾಯಕರಂತೆ ಆದರೆ ಆ ದೇವರೇ ಕಾಪಾಡಬೇಕು. ಮೊಯ್ಲಿ,ಕೃಷ್ಣ ಅವರುಗಳ ಟ್ರಾಕ್ ರೆಕಾರ್ಡ್ ಏನೊ ಚೆನ್ನಾಗಿದೆ. ಮುಂದೆ ಕಾದು ನೋಡಬೇಕಷ್ಟೆ!

  4. Athradi Says:

    ಜನರಿಗೆ ಏನು ಬೇಕು, ಹೇಗೆ ಬೇಕು ಅನ್ನುವುದನ್ನು ತಿಳಿದು, ಸರಕಾರ ಯೋಜನೆ ಹಾಕಿಕೊಂಡರೆ ಅದರಿಂದ ಲಾಭವೂ ಇರುತ್ತದೆ. ಇಲ್ಲಾಂದ್ರೆ ನಷ್ಟ ತರುವ ಯೋಜನೆಗಳಾಗಿ ಬಿಡುತ್ತವೆ.
    ಏನು ಮಾಡೋಣ ಹೇಳಿ. ಜನರ, ಜನರಿಗಾಗಿ, ಜನರಿಂದ ದೂರ ಇರೋ ಸರಕಾರ ಈಗಿನ ಸರಕಾರ ಅನ್ನೋ ಹಾಗೆ ಆಗಿದೆ.

  5. ವಿಜಯರಾಜ್ ಕನ್ನಂತ Says:

    eega hagalu railu anta bEre railu biDtaa iddaare….

Leave a Reply